Sunday 25 October 2015

ಮೈ ಆಜಾದ್ ಹೂಂ... ಔರ್ ಆಜಾದ್ ಹೀ ರಹೂಂಗಾ...ಭಾಗ 2



ಈ ಹಿಂದೆ ಹೇಳಿದಂತೆ ಆಜಾದ್ ಸಣ್ಣ ಪ್ರಾಯದಲ್ಲೇ ತನ್ನ ದೇಶಪ್ರೇಮದ ಕಂಪನ್ನು ಬೀರತೊಡಗಿದ್ದರು... ಮೊದಲಿಗೆ ಗಾಂಧಿಯ ಹಿಂಬಾಲಕರಾಗಿ ಕಾಂಗ್ರೆಸ್ ನ ಕಾರ್ಯಕರ್ತರಾಗಿದ್ದ ಇವರು , ಕಾಂಗ್ರೆಸ್ ಅನ್ನು ತೊರೆಯಲು ಕಾರಣವಾದದ್ದು ಗಾಂಧೀಜಿಯ ನಿಲುವು ... ಚೌರಿ ಚೌರಾ ಎಂಬಲ್ಲಿ ನಡೆದ ಅಹಿತಕರ ಘಟನೆಗೆ, ಸಫಲತೆಯ ಹಾದಿ ಹಿಡಿದ ಅಸಹಕಾರ ಚಳುವಳಿಯನ್ನು ಗಾಂಧೀಜಿ ನಿಲ್ಲಿಸಿಬಿಟ್ಟದ್ದು... ಆಜಾದರಿಗೆ ತುಂಬಾ ನೋವು ತಂದಿತ್ತು... ಇನ್ನೊಂದು ಕಡೆಯಲ್ಲಿ ಜಲಿಯನ್ ವಾಲಾಭಾಗ್ ಘಟನೆ ಅವರೊಳಗಿನ ರೋಶವನ್ನು ಉಕ್ಕಿಸಿತ್ತು...ಮುಖ್ಯವಾಗಿ ಈ ಎರಡು ಘಟನೆಯೇ ಆಜಾದರನ್ನು ಕ್ರಾಂತಿಯ ಲೋಕಕ್ಕೆ ಸ್ವಾಗತಿಸಿದ್ದು...ಕೈ ಹಿಡಿದು ಕರಕೊಂಡು ಹೋದವರು ಮನ್ಮಥನಾಥ ಗುಪ್ತ ಅನ್ನೋ ಅವರ ಒಬ್ಬ ಸಹಪಾಠಿ..ಮುಂದಕ್ಕೆ ನಿಧಾನವಾಗಿ ಅಜಾದರಿಗೆ ಒಬ್ಬೊಬ್ಬರಾಗೇ ಕ್ರಾಂತಿಕಾರಿಗಳ ಪರಿಚಯವಾಗತೊಡಗಿತು...ರಾಜೇಂದ್ರ ಲಾಹಿರಿ, ಶಚೀಂದ್ರ ಬಕ್ಷಿ, ರಬೀಂದ್ರ ಮೋಹನ ಕರ್, ಜೋಗೇಶ್ ಚಂದ್ರ ಚಟರ್ಜಿ, ಗೋವಿಂದ ಚರಣ ಕರ್, ಕುಂದನ್ ಲಾಲ್, ಭಜರಂಗ್ ಬಲಿ ಗುಪ್ತ..ಹೀಗೆ .....ಮುಂದಕ್ಕೆ ಮಹಾನ್ ಕ್ರಾಂತಿಕಾರಿ ಗುರು...ರಾಮ್ ಪ್ರಸಾದ್ ಬಿಸ್ಮಿಲ್...ಮುಂದೆ ಈ ಬಿಸ್ಮಿಲ್ ಅವರೆ ಕ್ರಾಂತಿಕಾರಿಕಾರಿಗಳ ನಾಯಕರಾಗಿ ಕಾಕೋರಿಯಲ್ಲಿ ಸರಕಾರಿ ಖಜಾನೆ ಲೂಟಿ ಮಾಡಿದ್ದು...
ರಾಮ ಪ್ರಸಾದ್ ಬಿಸ್ಮಿಲ್ ಅವರ ಗರಡಿಯಲ್ಲೇ ಚಂದ್ರ ಶೇಖರ ಆಜಾದ್ ಅನ್ನೋ ಕ್ರಾಂತಿಕಾರಿ ದೇಶಭಕ್ತನೊಬ್ಬ ರೂಪುಗೊಂಡದ್ದು...ರಾಮ್ ಪ್ರಸಾದ್ ಬಿಸ್ಮಿಲ್ ಅವರೊಬ್ಬ ಅಪ್ಪಟ ಬ್ರಹ್ಮಾಚಾರಿ ಎಲ್ಲಾ ಮಹಿಳೆಯರನ್ನು ಜಗನ್ಮಾತೆಯಂತೆ ಕಾಣುತ್ತಿದ್ದರು... ಬಹುಶ ಇದೇ ಗುಣವನ್ನು ಅಜಾದ್ ಚಾಚು ತಪ್ಪದೆ ಪಾಲಿಸತೊಡಗಿದ್ದರು..ಅಜಾದರ ಬ್ರಹ್ಮಚರ್ಯಕ್ಕೆ ಕಳೆಕಟ್ಟುವಂಥಾ ಘಟನೆ ಅವರ ಜೀವನದಲ್ಲಿ ನಡೆದಿತ್ತು, ಹೆಚ್ಚಿನವರಿಗೆ ಈ ವಿಚಾರ ಗೊತ್ತಿರಲಿಕ್ಕಿಲ್ಲ...( ನನಗೂ ಅಜೇಯ ಓದಿದಾಗಲೇ ಗೊತ್ತಾಗಿದ್ದು...)
ಕಾಕೋರಿ ದರೋಡೆಯಾದ ಮೇಲೆ ಅಜಾದ್ ತಲೆ ಮರೆಸಿಕೊಳ್ಳುವ ಸಲುವಾಗಿ ಢಿಮರಾಪುರ್ ಅನ್ನೋ ಗ್ರಾಮದಲ್ಲಿ ಒಬ್ಬ ಸ್ವಾಮಿಯ ವೇಷದಲ್ಲಿ ನೆಲೆನಿಲ್ಲುತ್ತಾರೆ. ಆ ಊರಿನಲ್ಲಿ ಠಾಕೂರ್ ಮಲಖಾನ್ ಸಿಂಹ ಎಂಬ ಶ್ರೀಮಂತ ಜಮೀನ್ದಾರ ಇರುತ್ತಾನೆ ಮುಂದೆ ಅಜಾದರು ಬಹು ಹೊತ್ತು ಠಾಕೂರರ ಮನೆಯಲ್ಲೆ ಕಳೆಯ ತೊಡಗುತ್ತಾರೆ. ಸ್ವಾಮಿಯಾಗಿ ಆಜಾದರು ಎಷ್ಟೊಂದು ಪ್ರಸಿದ್ಧರಾಗುತ್ತಾರೆಂದರೆ ಆ ಊರಿನ ಎಲ್ಲರಿಗೂ ಅವರ ಮೇಲೆ ಅಪಾರ ನಂಬಿಕೆ.. ಇನ್ನೊಂದು ಊರಿಗೆ ತಮ್ಮ ಹೆಣ್ಣುಮಕ್ಕಳನ್ನು ಇವರೊಂದಿಗೆ ಕಳುಹಿಸಿಕೊಡಲು ಹಿಂದುಮುಂದು ನೋಡುತ್ತಿರಲಿಲ್ಲ... ಆಜಾದರೆಂದರೆ ಅಷ್ಟೊಂದು ವಿಶ್ವಾಸ...
ಆಗಿನ ಕಾಲದ ಶ್ರೀಮಂತ ಹೆಂಗಸರೂ ಸ್ವೇಚ್ಛಾಚಾರಿಗಳಾಗಿದ್ದರು, ತಮ್ಮ ಎಲ್ಲಾ ಬಗೆಯ ಆಸೆಯನ್ನ ಪೂರೈಸಿಕೊಳ್ಳುವಂತರಾಗಿದ್ದರು.ಒಮ್ಮೆ ಮಲಖಾನ್ ಸಿಂಗರ ಮನೆಗೆ ನೆರೆಯ ಸಂಸ್ಥಾನದ ಒಬ್ಬ ಶ್ರೀಮಂತ ಹೆಂಗಸು ಬಂದಿದ್ದಳು. ತನ್ನ ಮನೆಯಲ್ಲಿ ನಡೆಯಲಿದ್ದ ಒಂದು ವಿವಾಹಕ್ಕೆ ಆಹ್ವಾನ ನೀಡಲು ಬಂದಿದ್ದಳು.ಈ ರಜಪೂತ ಹೆಂಗಸು ತನ್ನ ಗಂಡನನ್ನು ಕಳಕೊಂಡಿದ್ದಳು , ಸಣ್ಣ ಪ್ರಾಯದಲ್ಲೇ ಮದುವೆಯಾಗಿದ್ದರಿಂದ ಹೆಚ್ಚೇನೂ ಪ್ರಾಯವಾಗಿರಲಿಲ್ಲ.. ಮುವತ್ತು ಮೂವತೈದಾಗಿತ್ತು. ಬಹಳ ಹಠಮಾರಿ ಹೆಂಗಸು.. ತಾನು ಬಯಸಿದ್ದನ್ನು ಪಡೆದೇ ತೀರಬೇಕೆಂಬ ಛಲಗಾರ್ತಿ..ಹೀಗೆ ಅತಿಥಿಯಾಗಿ ಬಂದ ಈಕೆಗೆ ಠಾಕೂರರ ಮನೆಗೆ ಬರುತಿದ್ದ ಸ್ವಾಮಿ ವೇಷದ ಆಜಾದರ ಮೇಲೆ ಮನಸ್ಸಾಯಿತು ವ್ಯಾಯಾಮ ಮಾಡಿ ಬಲಿಷ್ಠಗೊಂಡಿದ್ದ ಅವರ ದೇಹವನ್ನು ಕಂಡಾಗ ಇವನನ್ನು ಹೇಗಾದರೂ ಪಡೆದೇ ತೀರಬೇಕೆಂಬ ಮನಸ್ಸಿನ ಹುಚ್ಚು ಆಸೆ ಹೆಚ್ಚಾಯಿತು.. ಆದರೆ ಅಜಾದರೋ ಅಖಂಡ ಬ್ರಹ್ಮಾಚಾರಿ...ಆ ಹೆಂಗಸು ಅಜಾದರನ್ನು ಮೋಹಗೊಳಿಸಲು ಅದೆಷ್ಟೇ ಪ್ರಯತ್ನಿಸಿದರೂ ಅಜಾದರನ್ನು ತನ್ನೆಡೆಗೆ ಸೆಳೆದುಕೊಳ್ಲಲಾಗಲಿಲ್ಲ...ಒಂದು ದಿನ ಠಾಕೂರ್ ಮಲಖಾನ್ ಸಿಂಗ್ ಮತ್ತು ಅವನ ಸಹೋದರರು ಕೆಲಸದ ಮೇಲೆ ಎರಡು ಮೂರು ದಿನ ಹೊರಹೋಗಬೇಕಾಗಿತ್ತು ಮನೆಯಲ್ಲಿ ಬರಿಯ ಹೆಂಗಸರೇ..ಹಾಗಾಗಿ ರಾತ್ರಿ ಹೊತ್ತಲ್ಲಿ ಮಲಗಲು ಅಜಾದರು ಬರುತ್ತಿದ್ದರು, ಮಲಗುತ್ತಿದ್ದುದು ಮನೆಯ ಬಿಸಿಲು ಮಾಳಿಗೆಯಲ್ಲಿ...ಇಂತಹದ್ದೇ ಸಮಯಕ್ಕೆ ಕಾದಿದ್ದ ಆ ಹೆಂಗಸು ಆ ದಿನ ಎಲ್ಲರೂ ಮಲಗಿದ ಮೇಲೆ ಮೆಲ್ಲನೆ ಮನೆಯ ಮಾಳಿಗೆಗೆ ಹೋದಳು.. ಅಷ್ಟು ಹೊತ್ತಲ್ಲಿ ಅಲ್ಲಿಗೆ ಬಂದ ಆಕೆಯನ್ನ ಕಾರಣ ಕೇಳತೊಡಗಿದರೆ ಆಕೆ ಉತ್ತರಿಸಲ್ಲಿಲ್ಲ ಆದರೆ ಆಕೆಯ ವರ್ತನೆಯನ್ನು ಕಂಡಾಗಲೇ ಆಜಾದರಿಗೆ ಅವಳ ಮನದಾಸೆ ಗೊತ್ತಾಗಿ ಹೋಯಿತು...ತಡಮಾಡದೆ ಆಜಾದರು ಹೇಳಿದರು "ನೋಡಿ ಇಷ್ಟು ಹೊತ್ತಲ್ಲಿ ನೀವು ಇಲ್ಲಿ ಬರುವುದು ಸರಿಯಲ್ಲ ಹೊರಟು ಹೋಗಿ" ಆದರೆ ಇವನನ್ನು ಪಡೆಯಲೇ ಬೇಕೆಂಬ ಹುಚ್ಚು ಹೆಚ್ಚಾಗಿದ್ದ ಆಕೆ ಎಲ್ಲಿ ಕೇಳುತ್ತಾಳೆ...ಅವಳು ಹೇಳುತ್ತಾಳೆ.. ನೋಡು ನೀನು ನನ್ನಿಂದ ತಪ್ಪಿಸಿಕೊಂಡು ಹೋಗಲಾರೆ... ನನ್ನ ಮಾತು ಕೇಳು ಇಲ್ಲವಾದಲ್ಲಿ ನಾನು ಬೊಬ್ಬಿಡುತ್ತೇನೆ .. ಜನರನ್ನು ಕರೆದು ನನ್ನ ಮಾನಭಂಗ ಮಾಡಲು ಪ್ರಯತ್ನಿಸಿದ ಎಂದು ಎಲ್ಲರಿಗೂ ಹೇಳಿ ನಿನ್ನ ಮಾನ ಹರಾಜು ಹಾಕುತ್ತೇನೆ ಅಂದು ಬಿಟ್ಟಳು...ಇಪ್ಪತ್ತು ವರ್ಷದ ಸನ್ಯಾಸಿ ಯುವಕ ತನ್ನ ಮಾತಿಗೆ ಸಮ್ಮತಿಸುತ್ತಾನೆ ಎಂದುಕೊಂಡಿದ್ದಳು...ಆತ ಬೇಗನೆ ಬಾಗಿಲು ತೆರೆದು ಹೊರಗೋಡುವ ಪ್ರಯತ್ನ ಮಾಡಿದ ಆದರೆ ಈಕೆ ಮೊದಲೇ ಇನ್ನೊಂದು ಬದಿಯಿಂದ ಚಿಲಕ ಹಾಕಿಸುವ ವ್ಯವಸ್ಥೆ ಮಾಡಿದ್ದಳು...ಇನ್ನದರೂ ನನ್ನ ಮಾತನ್ನ ಕೇಳಿಯಾನು ಎಂದುಕೊಂಡಿದ್ದ ಆಕೆ ತನ್ನ ಬಯಕೆ ಈಡೇರಿತು ಅಂತಾನೆ ತಿಳಿದುಕೊಂಡಿದ್ದಳು ಆದರೆ ಅಜಾದ್ ಸೋಲೊಪ್ಪಿಕೊಳ್ಳುವವನೇ... ಹಿಂದೆ ಮುಂದೆ ನೋಡದೆ ಮನೆಯ ಮಾಳಿಗೆಯಿಂದ ಧುಮುಕಿಯೇ ಬಿಟ್ಟ... ಒಂದೆರಡಲ್ಲ ಹದಿನೆಂಟರಿಂದ ಇಪ್ಪತ್ತು ಅಡಿ ಎತ್ತರದಿಂದ ಹಾರಿದ್ದ ... ಕೇವಲ ತನ್ನ ಬ್ರಹ್ಮಚರ್ಯವ ಉಳಿಸುವ ಸಲುವಾಗಿ...ಎಂತಹಾ ಆತ್ಮ ನಿಗ್ರಹ...ಯಾರದರೂ ಎಡವುತ್ತಿದ್ದರು ಆದರೆ ತನ್ನ ಗುರು ಬಿಸ್ಮಿಲ್ ಅವರು ಹೇಳಿಕೊಟ್ಟ ಪಾಠ.. " ಮಾತೃವತ್ ಪರದಾರೇಷು" ಎಲ್ಲ ಸ್ತ್ರೀಯರೂ ತಾಯಂದಿರೇ ಎಂಬುದನ್ನು ಮರೆಯಲಿಲ್ಲ..ಇಷ್ಟೊಂದು ಕಠೋರ ನಿರ್ಧಾರ ಯಾತಕ್ಕಾಗಿ ಅಂದರೆ ಆತನ ಉತ್ತರ ಹೀಗಿತ್ತು...
"ಧ್ಯೇಯ ಜೀವಿಯಲ್ಲಿ ವಿಷಯಲಂಪಟತೆ ಇದ್ದಲ್ಲಿ ತನ್ನ ಆದರ್ಶಗಳನ್ನೆಲ್ಲ ಮೂಲೆಗೊತ್ತಿ ನೀಚ ಹಾಗೂ ಕ್ಷಣಿಕ ಸಮಾಧಾನ ನೀಡುವ ಭೋಗಗಳಿಗೆ ಬಲಿಬೀಳುತ್ತಾನೆ, ಅಂದೇ ಅವನ ಧ್ಯೇಯ ಜೀವನಕ್ಕೆ ತಿಲಾಂಜಲಿ . ತನ್ನ ಜೀವನದ ಗುರಿ, ಅನುಶಾಸನತೆ ಎಲ್ಲವನ್ನೂ ಕಳಕೊಂಡು ತನ್ನ ಸಂಸ್ಥೆಗೆ ಭಾರವಾಗುತ್ತಾನೆ" ಎಂತಹಾ ವಿಚಾರಧಾರೆ ಅಲ್ವ... ತಾಯಿ ಭಾರತಿಯ ದಾಸ್ಯದ ಸಂಕೋಲೆ ಮುರಿಯುವ ತನ್ನ ಮೂಲ ಗುರಿಯನ್ನು ಎಲ್ಲಿ ಮರೆತು ಹೋಗುತ್ತೇನೋ ಅನ್ನುವ ಕಾರಣಕ್ಕೆ ತನ್ನ ಎಲ್ಲಾ ದೈಹಿಕ ಕಾಮನೆಗಳನ್ನು ಮೆಟ್ಟಿ ನಿಂತಿದ್ದ ಅಜಾದ್...ತಾನು ತೊಡುವ ಬಟ್ಟೆಯ ಬಗ್ಗೆಯಾಗಲಿ... ತನ್ನ ಹೊಟ್ಟೆ ತುಂಬಿಸುವ ಕುರಿತು ಆಸಕ್ತಿ ಇರಲಿಲ್ಲ... ಅದೆಷ್ಟೋ ದಿನ ಬರಿಯ ನೆಲಗಡಲೆ ಮತ್ತು ನೀರು ಇವೇ ಅಜಾದರ ಮೃಷ್ಟಾನ್ನ ಭೋಜನವಾಗಿತ್ತಂತೆ... ಅವರಲ್ಲಿದ್ದುದು ಒಂದೇ ಹಸಿವು ತಾಯಿ ಭಾರತಿಯ ಸ್ವಾತಂತ್ರ್ಯ... ದೇಶಭಕ್ತಿಯ ಪರಾಕಾಷ್ಠೆ ಅಂದರೆ ಇದೇನಾ......

No comments:

Post a Comment