ಸ್ಯಾಂಡರ್ಸನ ಕೊಲೆಯಾದ ನಂತರ ಕ್ರಾಂತಿಕಾರಿಗಳಿಗೆ ಭಾರತದಲ್ಲಿ ಅಭಿಮಾನಿಗಳು ಜಾಸ್ತಿ ಆದರೂ ಅಂತಾನೆ ಹೇಳಬಹುದು, ಹಾಗೆಯೇ ಆರ್ಥಿಕ ಸಹಾಯವೂ ಸಾಕಷ್ಟು ಸಿಗತೊಡಗಿತು...ಹಾಗಾಗಿ ಆಜಾದ್ ಪಡೆ ಒಂದು ಹೆಜ್ಜೆ ಮುಂದುವರಿದು ಬಾಂಬ್ ಅನ್ನು ಕೂಡ ಗಳಿಸಿಕೊಂಡಿತ್ತು. ಬಾಂಬ್ ತಯಾರಿಕೆಗೆ ಸಹಾಯ ಮಾಡಿದ್ದು ಬಂಗಾಲದ ಅಮರ ಕ್ರಾಂತಿಕಾರಿ ಜತೀನ್ ದಾಸ್...ಅಂಗ್ಲರಿಗಾಗಿ ತಯಾರಾದ ಅಜಾದನ ಕಾರ್ಖಾನೆಯ ಬಾಂಬುಗಳಿಗೆ ಸಿಡಿಯೋದಕ್ಕೆ ಆಂಗ್ಲರೇ ವೇದಿಕೆ ನಿರ್ಮಿಸಿಕೊಟ್ಟರು
ಈ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಎರಡು ಮಸೂದೆಯನ್ನು ತರಲು ಯೋಜನೆಯನ್ನು ಹಾಕಿಕೊಂಡಿತು...
ಮೊದಲನೆಯದು "ವ್ಯಾಪಾರ ವಿವಾದ ಮಸೂದೆ( Trades dispute bill) " ಕಾರ್ಮಿಕರನ್ನು ಬಗ್ಗು ಬಡಿಯಲೆಂದೇ ರೂಪಿಸಿದ್ದು.
ಎರಡನೆಯದ್ದು "ಸಾರ್ವಜನಿಕ ಸಂರಕ್ಷಣಾ ಮಸೂದೆ( Public safety act)" ಇದರಿಂದ ಸರ್ಕಾರ ತನಗಿಷ್ಟ ಬಂದಂತೆ ಯಾರನ್ನೇ ಆದರೂ ಬಂಧಿಸಬಹುದಿತ್ತು. ಸಂಸತ್ತಿನಲ್ಲಿ ಈ ಮಸೂದೆಯನ್ನು ಪ್ರಬಲ ವಿರೋಧದ ನಡುವೆಯು ಅಂಗೀಕರಿಸೋದು ಖಚಿತವಾಗಿತ್ತು.ಕ್ರಾಂತಿಕಾರಿಗಳನ್ನು, ಸ್ವಾತಂತ್ರ್ಯ ಹೋರಾಟಗಾರರನ್ನು ಹದ್ದು ಬಸ್ತಿನಲ್ಲಿಡಲು ಸರ್ಕಾರ ಈ ರೀತಿ ಯೋಜನೆ ಮಾಡಿತ್ತು..ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುವುದರಲ್ಲಿತ್ತು.. ಅದೂ ವಿಭಿನ್ನ ರೀತಿಯಲ್ಲಿ...
ಕ್ರಾಂತಿಕಾರಿಗಳೆಲ್ಲ ಸೇರಿ ಈ ಮಸೂದೆ ಮಂಡನೆ ಆದೊಡನೆ ಸದನದಲ್ಲಿ ಬಾಂಬು ಸ್ಫೋಟಿಸಿ ವಿರೋಧ ವ್ಯಕ್ತಪಡಿಸಬೇಕು ಅಂತ ತೀರ್ಮಾನಿಸಿದರು... ಅಜಾದರ ಬಲವಾದ ವಿರೋಧದ ನಂತರವೂ ಭಗತ್ ಈ ಕೆಲಸವನ್ನು ತಾನೆ ಮಾಡುವುದಾಗಿ ಹಠ ಹಿಡಿದ... ಅತನ ಸಹಾಯಕ್ಕೆ ಸಜ್ಜಾದವನು ಬಟುಕೇಶ್ವರ ದತ್ತ್. ಈ ಮೀಟಿಂಗಿನಲ್ಲಿ ಮೊದಲ ಬಾರಿಗೆ ಅನ್ನುವಂತೆ ಅಜಾದರ ಮಾತಿಗೆ ಹಿನ್ನಡೆಯಾಯಿತು.. ಭಗತ್ ಹೋಗೋದು ಬೇಡ ಅಂದರೂ ಅದೇ ನಿರ್ಣಯವಾಯಿತು... ಬಾಂಬ್ ಎಸೆದು ಅಲ್ಲಿಂದ ತಪ್ಪಿಸಿಕೊಂಡು ಬರಬೇಕು ಅನ್ನೋದು ಅಜಾದರ ವಾದವಾಗಿತ್ತು ಆದರೆ.. ಭಗತ್ ಮತ್ತು ವಿಜಯಕುಮಾರರ ಯೋಜನೆಯೇ ಬೇರೆಯಾಗಿತ್ತು... ಅದು ಬಂಧನಕ್ಕೊಳಗಾಗುವುದು... ಆ ನಂತರ ಕೋರ್ಟಿನಲ್ಲಿ ತಮ್ಮ ವಾದವನ್ನಿಡುವ ಮೂಲಕ ಭಾರತೀಯರೆಲ್ಲರಿಗೆ... ಕ್ರಾಂತಿಕಾರಿಗಳ ಹೋರಾಟದ ಬಗ್ಗೆ ತಿಳಿಯಪಡಿಸಿ..ಜನಾಂದೋಲನಕ್ಕೆ ಚಾಲನೆ ನೀಡೋದು... ಒಂದು ರೀತಿಯಲ್ಲಿ ನೋಡಿದರೆ ಭಗತ್ ಸಿಂಗ ವಾದ ಒಪ್ಪತಕ್ಕದ್ದೇ... ಆದರೆ ಈ ಬಂಧನದಿಂದಾಗಿ ಮುಂದೆ ಉಳಿದ ಕ್ರಾಂತಿಕಾರಿಗಳು ಸಂಕಷ್ಟಕ್ಕೆ ಸಿಲುಕಿ ಬೀಳಲಿದ್ದಾರೆ ಅನ್ನೋದು ಮಾತ್ರ ಭಗತರ ಕಣ್ಣಿಗೆ ತೋಚದಾಯಿತು...
ಅಜಾದರೂ ಸಮಿತಿಯಲ್ಲಿನ ಒಮ್ಮತದ ನಿರ್ಣಯಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಯೇ ಬಿಟ್ಟರು...ಕಾರಣ ವ್ಯಕ್ತಿಗಿಂತ ಸಂಘಟನೆ ದೊಡ್ದದು ಎನ್ನುವುದು ಅವರು ನಂಬಿದ ಆದರ್ಶ. ಎಲ್ಲವೂ ಯೋಜನೆಯಂತೆಯೇ ನಡೆಯಿತು...ಸದನದಲ್ಲಿ ಮಸೂದೆ ಮಂಡನೆಯಾದೊಡನೆ ಬಾಂಬೆಸೆದು "ಇನ್ಕಿಲಾಬ್ ಜಿಂದಾ ಬಾದ್" ಎನ್ನುತ್ತಾ ಸಂಸ್ಥೆಯ ಕರಪತ್ರವನ್ನೆಸೆತ್ತಾ ಭಗತ್ ಹಾಗೂ ಬಟುಕೇಶ್ವರರು ಬಂಧನಕ್ಕೊಳಗಾದರು. ಬಂಧನದ ಸುದ್ದಿಯನ್ನು ತಂದ ಕೈಲಾಸ್ ಬಳಿ ಅಜಾದರು ಮನದಾಳದ ನೋವನ್ನು ತೋಡಿಕೊಂಡಿದ್ದು ಈ ರೀತಿ..." ಕೈಲಾಸ್! ನಾನೇನು ಮಾಡಲಿಹೇಳು? ರಣಜಿತ್ ಗೆ(ಭಗತ್) ಎಷ್ಟು ವಿಧದಲ್ಲಿ ಹೇಳಿದರೂ ಅವನು ನನ್ನ ಮಾತನ್ನು ಕೇಳಲೇ ಇಲ್ಲ... ಬಾಂಬು ಎಸೆದ ಮೇಲೆ ಪೋಲೀಸರೊಡನೆ ಸಿಕ್ಕಿ ಹಾಕಿಕೊಳ್ಳುವ ಮೊಂಡುತನ ನನಗೆ ಸ್ವಲ್ಪವೂ ಅರ್ಥವಾಗಲಿಲ್ಲ. ಈಗಲೂ ಅವನ ಈ ಕೃತ್ಯ ನನ್ನ ಮನಸ್ಸಿಗೆ ಹಿಡಿಸಿಲ್ಲ. ನಮ್ಮ ಸಂಸ್ಥೆಯ ಸಿದ್ಧಾಂತಗಳನ್ನು ಎಲ್ಲರಿಗೂ ಸ್ಪಷ್ಟವಾಗಿ ಸಾರಲು, ನಮ್ಮಷ್ಟಕ್ಕೆ ನಾವೇ ಬಂಧಿತರಾಗುವುದರಲ್ಲಿ ಏನು ಪುರುಷಾರ್ಥವಿದೆ ಹೇಳು? ಬೇರೆ ವಿಧಿಯಿಲ್ಲದೆ ಅಕಸ್ಮಾತಾಗಿ ಸಿಕ್ಕಿ ಬೀಳಬೇಕಾಗಿ ಬಂದರೆ ಆಗ ನ್ಯಾಯಾಲಯದಲ್ಲಿ ನಮ್ಮ ವಿಚಾರ ಪ್ರಚಾರ ಮಾಡೋಣ ಅಥವಾ ದಿಟ್ಟ ಹೃದಯದಿಂದ ನೇಣುಗಂಬ ಹತ್ತೋಣ. ನಮ್ಮ ಪ್ರಾಣಗಳನ್ನು ನಾವೇ ಗಂಡಾಂತರದಲ್ಲಿ ನೂಕಿ ಕೈಯಾರೆ ಕುತ್ತಿಗೆಗೆ ನೇಣು ಕುಣಿಕೆ ಹಾಕಿಕೊಳ್ಳುವ ಕೃತ್ಯ ನನಗೆ ಒಪ್ಪದು...ಆದರೆ ಕೇಂದ್ರ ಸಮಿತಿ ರಣಜಿತನ ಮಾತನ್ನು ಒಪ್ಪಿಕೊಂಡು ನಿರ್ಣಯ ಮಾಡಿತು ನಾನು ಅದರ ಒಮ್ಮತಕ್ಕೆ ಬದ್ಧನಾದೆ. ತಮ್ಮಾ ಅವರೆಲ್ಲರೂ ವಿಚಾರವಂತರು , ನನಗೆ ಕೆಲಸ ಮಾಡುವುದು ಮಾತ್ರ ಗೊತ್ತಿದೆ..."
ಈ ವಿಚಾರ ದಲ್ಲಿ ನನ್ನ ಬೆಂಬಲ ಭಗತ್ ಸಿಂಗ್ ಗಿಂತಲೂ ಅಜಾದರ ಪಾಲಿಗಿದೆ... ಆಜಾದರ ಮಾತಿಗೆ ಬೆಲೆ ಕೊಡದೆ ಕ್ರಾಂತಿಕಾರಿಗಳು ಎಡವಿದರು ಅನ್ನೋದು ನನ್ನ ಅಭಿಪ್ರಾಯ... ಮುಂದೆ ನಡೆದ ಘಟನೆಗಳು ಅದನ್ನೆ ಎತ್ತಿ ತೋರಿಸುತ್ತದೆ.ಬಂಧನಕ್ಕೊಳಗಾಗದೆ ಅಲ್ಲಿಂದ ತಪ್ಪಿಸಿಕೊಳ್ಳುತ್ತಿದ್ದಲ್ಲಿ ಇನ್ನಷ್ಟು ಕ್ರಾಂತಿಕಾರಿ ಚಟುವಟಿಕೆಗಳು ನಡೆದು ಭಾರತಕ್ಕೆ ಇನ್ನಷ್ಟು ಬೇಗ ಸ್ವಾತಂತ್ರ್ಯ ಸಿಕ್ಕಿರುತ್ತಿತ್ತೇನೋ...? ಆದರೆ ಅದು ಆಗಲೇ ಇಲ್ಲ.. ಭಗತರ ಬಂಧನ, ಕ್ರಾಂತಿಕಾರಿಗಳ ಬಂಧನಕ್ಕೆ ನಾಂದಿ ಹಾಡಿದಂತಾಯಿತು.. ಇವರ ಬಳಿ ಸಿಕ್ಕಿದ್ದ ಪಿಸ್ತೂಲು ಹಳೆಯ ಸ್ಯಾಂಡರ್ಸನ ಕೊಲೆಯ ರಹಸ್ಯವನ್ನು ಭೇಧಿಸಲು ಸಹಾಯ ಮಾಡಿತು... ಈ ನಂತರ ಆದ ಬಂಧನದಲ್ಲಿ ಫಣೀಂದ್ರ ಅನ್ನುವ ಕ್ರಾಂತಿಕಾರಿ ಸರ್ಕಾರಿ ಸಾಕ್ಷಿ ಯಾಗಿ ಬಿಟ್ಟ... ಆತ ಕ್ರಾಂತಿಕಾರಿಗಳ ಕೇಂದ್ರೀಯ ಸಮಿತಿಯ ಸದಸ್ಯರಲ್ಲೊಬ್ಬ... ಹೆಚ್ಚಿನ ಗುಟ್ಟುಗಳೆಲ್ಲವೂ ರಟ್ಟಾಯಿತು... ಯಾವ ವಿಷಯದ ಭಯ ಅಜಾದರನ್ನು ಕಾಡಿತ್ತೋ ಅದೇ ಆಗಿ ಹೋಗಿತ್ತು...ಮುಂದಿನ ದಿನಗಳಲ್ಲಿ ಕ್ರಾಂತಿಕಾರಿಗಳ ಓಡಾಟ ಮತ್ತಷ್ಟು ಕಷ್ಟವಾಯಿತು...ಹಲವು ಕ್ರಾಂತಿಕಾರಿಗಲ ಬಂಧನವಾಯಿತು... ಬಂಧನದ ಬಲೆಗೆ ಸಿಲುಕದ ತಿಮಿಂಗಿಲವೆಂದರೆ ಅದು ಅಜಾದ್ ಮಾತ್ರ...
No comments:
Post a Comment