ಮೊನ್ನೆ ಅಂದರೆ 31 ಮೇ ಹೊಸದಿಗಂತ ಪೇಪರಿನಲ್ಲಿ ಹೆ.ಬಾ. ಮಲ್ಯ ಇವರದೊಂದು ಆರ್ಟಿಕಲ್ ಓದಿದ್ದೆ...ನನಗೆ ತುಂಬಾ ಖುಷಿ ಕೊಟ್ಟ ಆರ್ಟಿಕಲ್..ಯಾಕೆಂದರೆ ಅದರ ವಸ್ತು ನನಗೆ ಇಷ್ಟವಾದ್ದರಲ್ಲಿ ಒಂದು.ಶೀರ್ಷಿಕೆ ಕೂಡ ಬಹಳ ಚೆನ್ನಾಗಿತ್ತು..." ಭಗವಂತ ಅನಂತ- ಮಾನವ ಬುದ್ಧಿ ಸೀಮಿತ "
ನಾಸ್ತಿಕತೆ ಮತ್ತು ಆಸ್ತಿಕತೆ ಹಾಗು ವಿಜ್ಞಾನ ಇದನ್ನೆಲ್ಲಾ ಒಳಗಂಡಿತ್ತು...ಅವರು ಹೇಳುತ್ತಾರೆ ನಾಸ್ತಿಕವಾದವನ್ನು ಪ್ರತಿಪಾದಿಸಿದ ಲೆನಿನ್, ಸ್ಟಾಲಿನ್ ಇಂತವರೆಲ್ಲರ ಅಂತ್ಯ ಅತ್ಯಂತ ತ್ರಾಸದಾಯಕವಾಗಿತ್ತಂತೆ, ಅಷ್ಟೇ ಏಕೆ ಭಾರತದ ಮಹಾನ್ ನಾಸ್ತಿಕ ಚಾರ್ವಾಕನ ಅಂತ್ಯಕಾಲದಲ್ಲಿ ಆತನಿಗೆ ಅತ್ಯಂತ ಘೋರ ಕಾಯಿಲೆ ಬಂದಿತ್ತಂತೆ, ಊರ ಜನ ಆತನನ್ನು ಊರ ಹೊರಗೆ ಬಿಟ್ಟು ಬಂದರಂತೆ, ಅಲ್ಲಿ ಆತ ನರಳಿ ನರಳಿ ಸತ್ತನಂತೆ...ಹಾಗಂತ ಎಲ್ಲಾ ನಾಸ್ತಿಕರಿಗೂ ದುರ್ಗತಿ...ಎಲ್ಲ ಆಸ್ತಿಕರಿಗೂ ಸದ್ಗತಿ ಅಂತ ಏನೂ ಇಲ್ಲ...ಆಸ್ತಿಕರಿಗೂ ಕೆಟ್ಟ ಅಂತ್ಯ ಬಂದಿದ್ದು ಉಂಟು ಅನ್ನುತ್ತಾರೆ.
ಹೀಗೆ ಮುಂದುವರೆಯುತ್ತಾ ವಿಜ್ಞಾನಿಗಳು ದೇವರ ಕುರಿತು ಏನನ್ನುತ್ತಾರೆ ಅನ್ನೋದನ್ನು ಉಲ್ಲೇಖಿಸಿದ್ದಾರೆ..
ಐನ್ ಸ್ಟೀನ್ ಪ್ರಕಾರ... "ದೇವರೆಂದರೆ ಈ ಸಮಸ್ತ ಸೃಷ್ಟಿಯಲ್ಲಿ ವ್ಯಾಪಿಸಿರುವ ಒಂದು ಮಹಾನ್ ನಿಯಮ" "ಧರ್ಮವಿಲ್ಲ ವಿಜ್ನಾನ ಕುರುಡು-ವಿಜ್ನಾನವಿಲ್ಲದ ಧರ್ಮ ಕುರುಡು" "ಈಶ್ವರೀಯ ಸತ್ಯವೇ ಅಂತಿಮ ಸತ್ಯ. ಆದರೆ ಅದರ ಸ್ಪಷ್ಟ ಸ್ವರೂಪ ನಿರ್ಧರಿಸುವುದು ಇಂದಿನ ಸ್ಥಿತಿಯಲ್ಲಿ ಅತ್ಯಂತ ಕಠಿಣ, ಈ ಬಗ್ಗೆ ಸಂಶೋಧನೆಗಳು ಜಾರಿಯಲ್ಲಿವೆ"
ನ್ಯೂಟನ್ ಹೇಳುತ್ತಾನೆ "ಸೂರ್ಯ ಚಂದ್ರ ಗ್ರಹ ತಾರೆಗಳು ಧೂಮಕೇತುಗಳಿಂದ ಒಡಗೂಡಿರುವ ಈ ವ್ಯವಸ್ಥೆಯ ಹಿಂದೆ ಯಾವುದೋ ಒಂದು ಚತುರ ಕೌಶಲ್ಯಪೂರ್ಣ ಹಾಗೂ ಅತ್ಯಂತ ಪ್ರತಿಭಾವಂತ ಶಕ್ತಿಯ ಕೈವಾಡ ಇರಲೇಬೇಕು."
ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಗಣಿತಜ್ನ ಶ್ರೀನಿವಾಸ ರಾಮನುಜಂ ಪ್ರಕಾರ " ದೇವರ ಚಿಂತನೆಯನ್ನು ಪ್ರತಿಬಿಂಬಿಸದ ಯಾವುದೇ ಸಮೀಕರಣ ನನ್ನ ಪಾಲಿಗೆ ಅರ್ಥ ಶೂನ್ಯ " ಇವೆಲ್ಲವನ್ನೂ ಉಲ್ಲೇಖಿಸುತ್ತಾ ಹೆ.ಬಾ. ಮಲ್ಯರು ಹೇಳುತ್ತಾರೆ..ಪ್ರಾಮಾಣಿಕ ವಿಜ್ನಾನಿಗಳು ಭಗವಂತನ ಅಸ್ತಿತ್ವವನ್ನು ಒಪ್ಪದೇ ಇರಲು ಸಾಧ್ಯವೇ ಇಲ್ಲ. ಏಕೆಂದರೆ ಅವರು ಅಂತಿಮ ಸತ್ಯದ ಅನ್ವೇಷಣೆಗೆ ಹೊರಟವರು, ದೇವರು ಅಥವಾ ಈ ಸೃಷ್ಟಿಯ ಕರ್ತ, ಪರಿಪಾಲಕ ಹಾಗೂ ವಿನಾಷಕವಾದ ಒಂದು ಶಕ್ತಿಯ ಅಸ್ತಿತ್ವವನ್ನು ನಿರಾಕರಿಸಿದ ಬೆನ್ನಿಗೆ ಅವರ ಮುಂದೆ ನೂರಾರು ಪ್ರಶ್ನೆಗಳು ಧುತ್ತೆಂದು ಎದ್ದು ನಿಲ್ಲುತ್ತದೆ.ಮೊದಲನೆ ಪ್ರಶ್ನೆಯೇ ಒಂದು ವೇಳೆ ಭಗವಂತನಿಲ್ಲದಿದ್ದಲ್ಲಿ ಈ ವಿಸ್ಮಯಕಾರಿ ಸೃಷ್ಟಿಯ ಕರ್ತ ಯಾರು ಎಂಬುದು. ಇಪ್ಪತ್ತನೇ ಶತಮಾನದಲ್ಲಿದ್ದ ಪ್ರಸಿದ್ಧ ವಿಜ್ನಾನಿ ಆರ್ಥರ್ ಎಡಿಂಗ್ಟನ್ ತನ್ನ ಒಂದು ಶೋಧ ಪ್ರಬಂಧದಲ್ಲಿ ಹೀಗೆ ಬರೆದಿದ್ದಾನೆ..ನೂರು ಬಿಲಿಯ ತಾರೆಗಳು ಸೇರಿ ಒಂದು ನಕ್ಷ್ತತ್ರಪುಂಜವಾಗುತ್ತದೆ, ಇಂಥಾ ನೂರು ಬಿಲಿಯ ತಾರಾ ಪುಂಜಗಳು ಸೇರಿ ಒಂದು ಬ್ರಹ್ಮಾಂಡವಾಗುತ್ತದೆ. ಇಂಥಾ ಅಸಂಕ್ಯ ಬ್ರಹ್ಮಾಂಡಳಿವೆ. ನಮ್ಮ ವಾಸಸ್ಥಾನವಾದ ಗ್ಯಾಲಕ್ಸಿಯ ಹೆಸರು ಕ್ಷೀರ ಪಥ. ಇದರ ಉದ್ದಗಲ ವ್ಯಾಪ್ತಿ ಒಂದು ಲಕ್ಷ ಜ್ಯೋತಿರ್ವರ್ಷಗಳು. ಇದರ ನಿರ್ಮಾತೃ ಯಾರು? ಇಷ್ಟೊಂದು ಯೋಜನಾಬದ್ಧ ಸೃಷ್ಟಿಯ ನಿರ್ಮಾಣ ಆಕಸ್ಮಿಕವಾಗಿ ತನ್ನಿಂತಾನೇ ಆಯಿತೆನ್ನುವುದು ಅಸಂಭವ " ಇಷ್ಟಾದರೂ ಕೆಲವೊಂದು ಬುದ್ಧಿಜೀವಿಗಳು ಒಂದು ಪ್ರಶ್ನೆಯನ್ನಿಡುತ್ತಾರೆ
ಹಾಗಾದರೆ ದೇವರನ್ನು ನಿರ್ಮಾಣ ಮಾಡಿದರಾರು?..ಇಂತಹಾ ಬುದ್ಧಿಜೀವಿಗಳಿಗೆ ಕೂಪ ಮಂಡೂಕದ ಕಥೆಯನ್ನು ಹೇಳುತ್ತಾ ಕೊನೆಯಲ್ಲಿ ತಮ್ಮ ಬರಹಕ್ಕೆ ಈ ರೀತಿಯ ಅಂತ್ಯ ಕೊಟ್ಟಿದ್ದಾರೆ...
" ಭಾರತೀಯರ ಭಗವಂತನ ಕಲ್ಪನೆ ಈ ವಿಶ್ವದಷ್ಟೇ ವಿಶಾಲವಾದುದು- ಅನಂತ, ಅನಾದಿ, ಅವ್ಯಕ್ತ, ಸರ್ವವ್ಯಾಪಿ, ಸರ್ವಶಕ್ತ. ಹಾಗಾಗಿ ಆತ ನಮ್ಮ ಪಂಚೇಂದ್ರಿಯ, ಮನ ಬುದ್ಧಿ, ತರ್ಕಗಳಿಗೆ ನಿಲುಕದವ. ಆದ್ದರಿಂದಲೇ ಋಉಷಿಗಳು ಹೇಳಿದರು ಆತ ಸ್ವಯಂಭೂ. ಆತನನ್ನು ಯಾರೂ ಹುಟ್ಟಿಸಲಿಲ್ಲ, ಆತ ಅನಾದಿ ಆತನಿಗೆ ಅಂತ್ಯವೆಂಬುದಿಲ್ಲ. ಈ ಸೃಷ್ಟಿಯಲ್ಲಿ ಆತನಿಲ್ಲದ ಒಂದು ಸೂಜಿಮೊನೆಯಷ್ಟು ಜಾಗವೂ ಇಲ್ಲ. ಇದೊಂದು ಅದ್ಭುತ ಕಲ್ಪನೆ. ಇತರ ಯಾವ ಮತಗಳಲ್ಲೂ ಇಂಥ ಅತ್ಯಂತ ತರ್ಕಬದ್ಧವಾದ, ವೈಜ್ನಾನಿಕ ಕಲ್ಪನೆ ಕಂಡು ಬರುವುದಿಲ್ಲ. ದೇವರನ್ನು ಋಉಷಿಗಳು ಸೃಷ್ಟಿಸಿದ್ದಲ್ಲ. ಅವರು ಅಂತಃಚಕ್ಷುವಿನಿಂದ ಕಂಡುಕೊಂಡಿದ್ದು. ಈ ಅನುಭೂತಿಯ ಆಧಾರದ ಮೇಲೆ ಇಂಥಾ ಅದ್ಭುತ ಕಲ್ಪನೆ ಮಾಡಿದ್ದು. ಈಗ ಆಧುನಿಕ ವಿಜ್ನಾನವೂ ಹೆಚ್ಚುಕಮ್ಮಿ ಈ ಅದ್ಭುತ ಕಲ್ಪನೆಯ ಹತ್ತಿರ ಹತ್ತಿರಕ್ಕೆ ಸರಿಯುತ್ತಿರುವುದರ ಅನುಭವಾಗುತ್ತಿದೆ."
ನನಗಂತೂ ಬಹಳಾನೆ ಖುಷಿ ಕೊಟ್ಟಿತು ಈ ಲೇಖನ... ಇಂತಹಾ ಉತ್ತಮ ಲೇಖನ ಒದಗಿಸಿದ್ದಕ್ಕಾಗಿ "ಹೆ.ಬಾ. ಮಲ್ಯ" ಅವರಿಗೆ ವಂದನೆಗಳು
No comments:
Post a Comment