Saturday 31 October 2015

OH MY GOD.... ನನ್ನೊಳಗಿನ ಆಸ್ತಿಕನಿಗೆ ಒಂದಷ್ಟು ಗೊಂದಲಗಳು...ಭಾಗ 1



OH MY GOD ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಸಿನಿಮಾವಿದು. ಬಹುತೇಕ ಎಲ್ಲರೂ ನೋಡಿದ್ದಾರೇನೋ… ಬಿಡುಗಡೆಗೆ ಮುನ್ನವೇ ಒಂದಷ್ಟು ಕುತೂಹಲವನ್ನು ಸೃಷ್ಟಿ ಮಾಡಿತ್ತು. ಸಿನಿಮಾ ನೋಡಿ ಬಂದ ಗೆಳೆಯರು ತುಂಬಾನೇ ಚೆನ್ನಾಗಿದೆ ಅಂತ ಅಂದಾಗ ನನ್ನೊಳಗಿನ ಕಾತರ ಅತಿಯಾಗತೊಡಗಿತ್ತು. ಹಾಗೂ ಹೀಗೂ ಸಮಯ ಹೊಂದಿಸಿ ನೋಡೆ ಬಿಟ್ಟೆ… ಹಾ ಚೆನ್ನಾಗೇ ಇದೆ , ಆದರೂ ನಾಸ್ತಿಕರಿಗೂ ಆಸ್ತಿಕರಿಗೂ ಒಂದಷ್ಟು ಗೊಂದಲಗಳನ್ನು ತಂದಿಟ್ಟಿದೆಯೇನೋ ಅನ್ನಿಸಿತು …ಆದರೆ ಪ್ರತಿಯೊಬ್ಬನಲ್ಲೂ ದೇವರ ಬಗೆಗೆ ಸಕಾರಾತ್ಮಕವಾಗಿಯೋ ಅಥವಾ ನಕಾರಾತ್ಮಕವಾಗಿಯೋ ಯೋಚಿಸುವಂತೆ ಮಾಡುವುದಂತೂ ಸತ್ಯ. ಅದರ ಜೊತೆಗೆ ಮಠ ಮಂದಿರಗಳ ಬಗ್ಗೆ, ಸ್ವಾಮೀಜಿಗಳ ಬಗ್ಗೆ ತಾತ್ಸಾರದ ಭಾವನೆ ಮೂಡಿಸುವುದೇನೋ… ಕಾಂಜೀ ಲಾಲ್ ಜೀ ಮೆಹ್ತಾ ಅನ್ನೋ ಗುಜರಾತಿ ವ್ಯಾಪಾರಿ, ದೇವರ ವಿಗ್ರಹಗಳನ್ನು ಮಾರೋ ವರ್ತಕ ಈ ಚಿತ್ರದ ಮುಖ್ಯ ಕಥಾ ಪಾತ್ರ. ಸಿನಿಮಾ ಆರಂಭಗೊಳ್ಳೋದು ಅವನಲ್ಲಿನ ಒಂದೊಂದೇ ಕೆಟ್ಟ ಗುಣಗಳ ಅನಾವರಣದ ಮೂಲಕ. ಹಣ ಸಂಪಾದನೆಗಾಗಿ ಆತ ಯಾವ ಮಾರ್ಗವನ್ನು ಬಳಸಲು ಹಿಂದೆ ಮುಂದೆ ನೋಡೋಲ್ಲ. ಖಾಲಿ ಬಾಟಲಿಗೆ ಟ್ಯಾಪ್ ನೀರು ತುಂಬಿಸಿ ಗಂಗಾಜಲ ಅಂತ ಮಾರೋದು, ಜನರ ಭಾವನೆಯನ್ನು ತನ್ನ ವ್ಯಾಪಾರವಾಗಿಸೋದು ಅವನಿಗೆ ಕರಗತ. ಪಕ್ಕಾ ನಾಸ್ತಿಕ. ದೇವರ ವಿಗ್ರಹಗಳೆಲ್ಲವೂ ಆತನಿಗೆ ಆದಾಯ ತಂದು ಕೊಡೋ ವಸ್ತುಗಳಷ್ಟೇ… ಆತ ಹೇಳೋದು ಅದನ್ನೆ ಎಲ್ಲಿಯವರೆಗೆ ದೇವರ ಮೇಲಿನ ನಂಬಿಕೆಗಳು ಜನರಲ್ಲಿರುತ್ತೋ ಅಲ್ಲಿವರೆಗೆ ನನ್ನ ವ್ಯಾಪಾರಕ್ಕೆ ಕುಂದು ಕೊರತೆನೇ ಇಲ್ಲ ಅಂತ. ಯಾವುದೋ ಉಚಿತ ಯಾತ್ರೆಯಲ್ಲಿ ಹೋಗಿ ದೇವರ ವಿಗ್ರಹಗಳನ್ನು ಕೊಂಡು ತರುತ್ತಾನೆ, ಗಂಗಾಜಲ ಎಂದು ವೈನ್ ಅನ್ನು ಎಲ್ಲರಿಗೂ ಕುಡಿಸುತ್ತಾನೆ ಮತ್ತು ಮೂರ್ತಿಗಳ ಬಗೆಗೆ ಸುಂದರ ಕಥೆ ಕಟ್ಟಿ ಭಕ್ತರಿಗೆ ಮೋಸ ಮಾಡಿ ಮಾರಾಟ ಮಾಡುವಂತಾದ್ದು ಆತನ ಲಾಭದಾಯಕ ವ್ಯಾಪಾರದ ಒಳಗುಟ್ಟು. ಆತನ ನಾಸ್ತಿಕತೆ ಎಲ್ಲಿಯವರೆಗೆ ಅಂದರೆ ತನ್ನ ಮಗನನ್ನು ಮೊಸರು ಕುಡಿಕೆಯಲ್ಲಿ ಭಾಗವಹಿಸೋದನ್ನು ತಪ್ಪಿಸುವುದಕ್ಕಾಗಿ ಸ್ವಾಮೀಜಿಯೊಬ್ಬರ ಹೆಸರು ಹೇಳಿ, ಭಗವಂತ ಇವತ್ತು ಬೆಣ್ಣೆ ತಿನ್ನುತ್ತಾನೆ….. ಎಲ್ಲರೂ ನಿಮ್ಮ ಮನೆಯ ಮೂರ್ತಿಗೆ ಇಲ್ಲವೆ ಹತ್ತಿರದ ಮೂರ್ತಿಗೆ ನೀವೆ ನಿಮ್ಮ ಕೈಯಾರೆ ತಿನ್ನಿಸಿ ಈ ಚಮತ್ಕಾರ ನಡೆಯೋದು ಬರಿಯ ಒಂದು ಘಂಟೆಯವರೆಗೆ ಮಾತ್ರ … ಅಂತ ಅಪಪ್ರಚಾರ ಮಾಡುತ್ತಾನೆ.( ವಿಚಿತ್ರ ಅಂದರೆ ಅವನ ಮಾತು ಕೇಳುತ್ತಿದ್ದಂತೆ ಜನ ಚೆಲ್ಲಾಪಿಲ್ಲಿ… ಯಾರೋ ಒಬ್ಬ ಅಪರಿಚಿತ ಸಂಘಟಕರ ಕಣ್ಣು ತಪ್ಪಿಸಿ ಸ್ಟೇಜ್ ಗೆ ಗೊತ್ತಾಗದಂತೆ ಹೋಗಿ ಈ ರೀತಿ ಅನೌನ್ಸ್ ಮಾಡೋದಿಕ್ಕೆ ಆಗೋದು ಮತ್ತು ಅದನ್ನು ತಟಕ್ಕನೆ ನಂಬಿ ಓಡೋ ಜನರು ಸಿನಿಮಾದಲ್ಲಿ ಮಾತ್ರ ಸಿಗೋಕೆ ಸಾಧ್ಯ…)ಆತನ ಈ ರೀತಿಯ ನಡೆಯಿಂದ ಅದೇನಾಗುತ್ತೋ ಹಠಾತ್ತಾಗಿ ಅಕಾಶದಲ್ಲಿ ಕಾರ್ಮೋಡಗಳುಒಟ್ಟಾಗಿ ಜೋರಾದ ಮಳೆ ಬಂದು ಈತನ ಅಂಗಡಿ ಬಿದ್ದು ಹೋಗುತ್ತೆ. ವಿಶೇಷ ಅಂದ್ರೆ ಇವನ ಅಂಗಡಿಗಿಂತಲೂ ದುರ್ಬಲ ಅಂಗಡಿಗಳಿದ್ದರೂ ಇವನ ಅಂಗಡಿ ಒಂದು ಮಾತ್ರ ಬಿದ್ದು ಬಿಡುತ್ತೆ. ಈತನಿಗೆ ಬುದ್ಧಿ ಕಲಿಸಲು ದೇವರೆ ಹೀಗೆ ಮಾಡಿದ್ದಾನೆ ಅನ್ನೋ ಥರ ಕಾಣಿಸುತ್ತೆ. ಹೆಂಡತಿ ಮಕ್ಕಳಿಗೆ ಮತ್ತು ಹತ್ತಿರದ ಸಂಭಂಧಿಗಳಿಗೆ ಗಾಬರಿಯಾದರೂ ಆತ ನಿಶ್ಚಿಂತ… ಕಾರಣ …. ಆತ ಮಾಡಿಸಿರೋ ಇನ್ಶೂರೆನ್ಸ್ ಪಾಲಿಸಿ. ಆದ್ರೆ ಆತನಿಗೆ ಅಘಾತವಾಗೋದು “Act of God” ಅನ್ನೋ ಕಂಡೀಷನ್ ಅನ್ನು ಮುಂದಿಟ್ಟು ಇನ್ಶೂರೆನ್ಸ್ ಕಂಪನಿ ಈತನ ಅರ್ಜಿಯನ್ನು ವಜಾ ಮಾಡಿದಾಗಲೇ (ಇಲ್ಲಿ ನಿರ್ದೇಶಕರು ಜನಸಾಮಾನ್ಯರು ಮಾಡೋ ತಪ್ಪನ್ನು ಚೆನ್ನಾಗಿ ತೋರಿಸಿದ್ದಾರೆ. ನಿಯಮಗಳನ್ನು ಓದದೇ ಸಹಿ ಹಾಕೋದು)…ಇತ್ತ ಆತನ ಭೂಮಿಯಲ್ಲಿ ಮೂರ್ತಿಗಳೆಲ್ಲ ಒಡೆದು ಹೋದ ಕಾರಣ ಆ ಭೂಮಿಯನ್ನು ಕೊಳ್ಳಲೂ ಯಾರೂ ಮುಂದೆ ಬರೋದಿಲ್ಲ… ಹೀಗೆ ಕಷ್ಟಗಳ ಮೇಲೆ ಕಷ್ಟಗಳು ಬಂದಾಗ ಆತನಿಗೆ ಹೊಸ ಯೋಚನೆ ಬರುತ್ತದೆ ಅದೇ…. “ದೇವರ ಮೇಲೆ ಕೇಸ್”…
ಕೇಸ್ ಹಾಕೋಕೆ ಯಾವುದೇ ವಕೀಲ ಒಪ್ಪದಿದ್ದಾಗ ಇವನಿಗೆ ಸಿಗೋದು “ಹನೀಫ್ ಖುರೇಷಿ” ಅನ್ನೊ ಅಂಗವಿಕಲ ಲಾಯರ್. ಆತ ಕಾಂಜೀ ಗೆ , ನೀನೆ ವಕಾಲತ್ತು ಮಾಡಬಹುದು ಅಂತ ಹೇಳಿ ಲೀಗಲ್ ನೋಟೀಸು ತಯಾರು ಮಾಡಿ ಕೊಡುತ್ತಾನೆ. ನೋಟೀಸು ಕೊಡೋದಾದ್ರೂ ಎಲ್ಲಿಗೆ … ಮಠ ಮಂದಿರಗಳಿಗೆ. ಬಹುಶಃ ಇಲ್ಲಿಂದ ನಿರ್ದೇಶಕರು ತಾವು ಹೇಳಬಯಸಿರೋ ವಿಷಯಗಳ ಆರಂಭವಾಗುತ್ತದೆ. ಚಿತ್ರದ ಆರಂಭದಲ್ಲಿ ಯಾವುದೇ ಧರ್ಮದ ಬಗೆಗೆ ಅವಹೇಳನ ಮಾಡೋ ಉದ್ದೇಶವಿಲ್ಲ ಅಂತ ಹೇಳಿಕೊಂಡರೂ ಹಿಂದೂ ಧರ್ಮವೇ ಅತಿಯಾಗಿ ಅಪಮಾನಕ್ಕೀಡಾಗಿರೋದು ಸ್ಪಷ್ಟವಾಗಿ ಕಾಣುತ್ತೆ. ಸದ್ಯಕ್ಕೆ ಆ ವಿಷಯವನ್ನು ಬದಿಗಿಡೋಣ.
ಚಿತ್ರದಲ್ಲಿ ಮುಂದೆ ಕಾಣಿಸೋದು ಒಂದಷ್ಟು ಜನ ಕಪಟ ಸನ್ಯಾಸಿಗಳು (ಸಾಮಾನ್ಯವಾಗಿ ಕಪಟ ಸನ್ಯಾಸಿಗಳು ಕೂಡ ಜನರನ್ನು ಆಕರ್ಷಿಸುವಂತೆಯೇ ವರ್ತಿಸುತ್ತಾರೆ, ಆದರೆ ಇಲ್ಲಿನ ಅವರ ವರ್ತನೆ ಸ್ವಲ್ಪ ವಿಪರೀತವಾಗಿ ತೋರಿಸಿದಂತೆ ನನಗನಿಸಿತು)… ಧರ್ಮದ ಹೆಸರಿನಲ್ಲಿ ಆಸ್ತಿಕರ ಹಣ ವಸೂಲಿ ಮಾಡುವಂತಾ ವ್ಯಕ್ತಿಗಳು. ಇವರೆಲ್ಲರೂ ಕಾಂಜೀ ಗೆ ಪ್ರತ್ಯುತ್ತರ ನೀಡೋಕೆ ಕೋರ್ಟಿಗೆ ಹಾಜರಾಗುತ್ತಾರೆ. ಕೋರ್ಟಿನಲ್ಲಿ ಎದುರು ಪಾರ್ಟಿ ಲಾಯರ್ ಈ ಕೇಸಿಗೆ ಅಸ್ತಿತ್ವವೇ ಇಲ್ಲ , ನಿಯಮ ನಿಬಂಧನೆ ನೋಡದೇ ಪಾಲಿಸಿಗೆ ಸಹಿ ಹಾಕಿದ್ದಾನೆ ಎಂದಾಗ ಕಾಂಜೀ ಮೊದಲು ಹೇಳೋದೇ ನನಗೂ ಕೇಸ್ ಹಾಕೋ ಮನಸ್ಸಿಲ್ಲ ನನಗೆ ಬೇಕಾಗಿರೋದು ಹಣ ಮಾತ್ರ ಕೊಟ್ಟು ಬಿಡಿ ಅನ್ನುತ್ತಾನೆ. ಸ್ವಾಮೀಜಿಗಳು ಯಾಕೆ ಕೊಡಬೇಕು ಅನ್ನೋ ವಾದಕ್ಕೆ ಕಾಂಜೀ ಯ ಉತ್ತರ, ಇನ್ಶೂರೆನ್ಸ್ ಕಂಪನಿಯವರು ಹೇಳಿದ್ದಾರೆ ನನಗಾದ ನಷ್ಟ ಭಗವಂತ ಮಾಡಿದ್ದು ಹಾಗಾಗಿ ಭಗವಂತನಲ್ಲಿ ನನ್ನ ಹಣ ಕೇಳೋದು ನನ್ನ ಹಕ್ಕು ಅಂತ. ( ಇಲ್ಲಿ ನನಗಾಗೋ ಗೊಂದಲ ಅದುವರೆಗೂ ದೇವರಿಲ್ಲ ಅನ್ನುತ್ತಿದ್ದವ, ದೇವರಿಂದ ನಷ್ಟವಾಗಿದೆ ಅಂತ ಯಾರೋ ಹೇಳಿದಾಗ ಹಠಾತ್ತಾಗಿ ದೇವರಿದ್ದಾನೆ ಅಂತ ನಂಬೋದು ಯಾಕೆ?) ಮುಂದೆ ಎದುರುಗಡೆ ಲಾಯರ್ ಮಂದಿರಗಳೇಕೆ ಹಣ ಕೊಡಬೇಕು ಇನ್ಶೂರೆನ್ಸ್ ಕಂಪೆನಿಗಳಿಗೆ ಪ್ರೀಮಿಯಮ್ ಕಟ್ಟುತ್ತೀರಾ ಮಂದಿರಗಳಲ್ಲೇನು ನೀವು ಹಣ ಕಟ್ಟುತ್ತೀರಾ ಅನ್ನುತ್ತಾರೆ. ಪಕ್ಕನೆ ಕಾಂಜೀ ದೇವಾಲಯಗಳಲ್ಲಿ ಮಾಡಿದ ಸೇವೆಗಳ ರಶೀದಿ ತೋರಿಸಿ ನಾನು ಹಣ ಕಟ್ಟಿದ್ದೇನೆ ಅನ್ನುತ್ತಾನೆ.( ಮತ್ತೊಂದು ಜಿಜ್ಞಾಸೆ ಹಣ ಕಟ್ಟಿದೊಡನೆ ಒಳ್ಳೆ ಫಲವನ್ನು ಬಯಸೋ ವ್ಯಕ್ತಿಗೆ ಕೆಟ್ಟದ್ದು ಮಾಡಿದಾಗ ಅದರ ಶಿಕ್ಷೆಯನ್ನು ಸ್ವೀಕರಿಸೋದಕ್ಕೂ ತಯಾರಾಗಿರಬೇಕಲ್ವಾ…ತಾನು ಮೋಸದಿಂದ ಗಂಗಾಜಲ ಮಾರಿದ್ದು, ಕಮ್ಮಿ ಬೆಲೆಗೆ ಮಾರಬೇಕಾಗಿದ್ದ ಮೂರ್ತಿಯನ್ನು ಸುಳ್ಳು ಹೇಳಿ ಜಾಸ್ತಿ ಬೆಲೆಗೆ ಮಾರಿದ್ದು ಇವುಗಳಿಗೆಲ್ಲ ಶಿಕ್ಷೆ ಅನುಭವಿಸಲು ಯಾಕೆ ತಯಾರಿಲ್ಲ?) ಇನ್ನೂ ಮುಂದುವರಿದು ದೇವಾಲಯವನ್ನು ಅಂಗಡಿಗಳೆನ್ನುವುದು, ಹಾಕಿದ ಕಾಣಿಕೆಯನ್ನು ಇನ್ವೆಸ್ಟ್ಮೆಂಟ್ ಅನ್ನೋದು, ಸ್ವಾಮೀಜಿಗಳನ್ನು ಸೇಲ್ಸ್-ಮೆನ್ ಅನ್ನೋದು ಹೀಗೆ ಕಾಂಜೀಯ ವಾದಸರಣಿ ಮುಂದುವರಿಯುತ್ತದೆ.( ಇಲ್ಲಿ ನಗು ತರಿಸುವಂತಾದ್ದು ಅಂದರೆ ಕಾಂಜೀಯ ವ್ಯಕ್ತಿತ್ವದಲ್ಲಿ ಆಗೋ ಬದಲಾವಣೆ, ಕೆಟ್ಟತನವೆಲ್ಲಾ ಮಾಯವಾಗಿ ಒಳ್ಳೆಯತನ ಅರಳಲಾರಂಭಿಸುತ್ತದೆ.
ಆತನ ಮಾತುಗಳು ನೋಡಿ… ಮಂದಿರದವರು ಹೇಳುತ್ತಾರೆ ಶ್ರದ್ಧೆಯಿಂದ ದಾನ ಮಾಡಿ , ದೇವರು ನಿಮ್ಮ ಕೈ ಬಿಡೋದಿಲ್ಲ… ಇನ್ಶೂರೆನ್ಸ್ ಕಂಪನಿಯವರು ಹೇಳುತ್ತಾರೆ ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಕಟ್ಟಿ, ನಾವು ನಿಮ್ಮ ಬಿಟ್ಟು ಹಾಕೋದಿಲ್ಲ. ನಾನು ಎರಡನ್ನೂ ಮಾಡಿದ್ದೇನೆ, ಆದರೆ ಈಗ ಇಬ್ಬರೂ ನನ್ನ ಪರವಾಗಿಲ್ಲ. ನನ್ನ ಹೆಂಡತಿ ಮಕ್ಕಳು ಬೀದಿಗೆ ಬರುತ್ತಾರೆ… ಎಂಥಾ ವಿಚಿತ್ರ ಅಲ್ವಾ ಮಂದಿರಗಳು ಹೇಳಿದ್ದು ಶ್ರದ್ಧೆಯಿಂದ “ದಾನ” ಮಾಡಿ ಎಂದು ಇನ್ವೆಸ್ಟ್ಮೆಂಟ್ ಅಲ್ಲವಲ್ಲ.ಆತನೇ ಹೇಳುವ ಪ್ರಕಾರ ಆತ ಮಾಡಿದ್ದು ಇನ್ವೆಸ್ಟ್ಮೆಂಟ್ ಅದೂ ಶ್ರದ್ಧೆಯಿಂದಲ್ಲ ಹೆಂಡತಿ ಹೇಳಿದ್ದಕ್ಕಾಗಿ…)ಈತನ ಭಾವನಾತ್ಮಕ ವಾದಕ್ಕೆ ಜಡ್ಜ್ ಕೇಸು ನಡೆಯಲಿ ಅನ್ನುತ್ತಾರೆ ಕಾರಣ ಮದ್ಯಮ ವರ್ಗದವನಾದ ಕಾಂಜೀಗೆ ಹಲವು ಲಕ್ಷ ರುಪಾಯಿ ಅನ್ನೋದು ದೊಡ್ದ ಮೊತ್ತ ಹಾಗಾಗಿ ಈ ಕೇಸು ನಡೆಯಬೇಕು ಅನ್ನುತ್ತಾರೆ.ಅಲ್ಲಿಂದ ಶುರುವಾಗುತ್ತೆ ಗೊಂದಲಮಯ ತರ್ಕಗಳು. ಮತ್ತು ಆತನ ಸಹಾಯಕ್ಕಾಗಿ ಆಗೋ ಹೊಸ ಪಾತ್ರವೊಂದರ ಎಂಟ್ರಿ….ಏನೆಲ್ಲ ತರ್ಕಗಳಿವೆ?… ಯಾವ ಹೊಸ ಪಾತ್ರದ ಎಂಟ್ರಿಯಾಗುತ್ತೆ??? ಕೇಸು ಏನಾಗುತ್ತೆ ?????
ಹಿಂದಿನ ಬಾರಿ ಹೇಳಿದಂತೆ ಕಾಂಜೀಯ ದೇವರ ಮೇಲಿನ ಕೇಸ್ ಅನ್ನು ಜಡ್ಜ್ ಒಪ್ಪಿಕೊಳ್ಳುತ್ತಾರೆ. ಆದರೆ ಭಾರತದಂತಹ ಆಸ್ತಿಕರ ನಾಡಿನಲ್ಲಿ ದೇವರ ಮೇಲೆ ಕೇಸ್ ಹಾಕಿದರೆ ಬದುಕಿಯಾನೆ…? ಅವನ ಮೇಲೆ ರಾಜಕೀಯ ಪ್ರೇರಿತ ಆಕ್ರಮಣವಾಗುತ್ತೆ. ಹಾಗೂ ಹೀಗೂ ತಲೆ ತಪ್ಪಿಸಿ ಓಡುತ್ತಿರುವಾಗ ಆತನ ರಕ್ಷೆಗಾಗಿ ಬರುವವನೇ ಆಧುನಿಕ ಧಿರಿಸಿನ ಭಗವಂತ. ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮ… ಹಾ ಭಗವಂತನೇ ಈತನ ಸಹಾಯಕ್ಕಾಗಿ ಬರುತ್ತಾನೆ.
ಇತ್ತ “Act of God ” ನಿಂದಾಗಿ ಕಷ್ಟಕ್ಕೊಳಗಾದವರೆಲ್ಲಾ ಕಾಂಜೀಯ ಸಹಾಯದಿಂದ ಮಸೀದಿ , ಚರ್ಚುಗಳಿಗೆ ನೋಟೀಸು ಕಳುಹಿಸುತ್ತಾರೆ. ಒಂದು ಹೊತ್ತಿನಲ್ಲಿ ಮೀಡಿಯಾಗಳಿಗೆ ಸುದ್ದಿಯ ವಿಷಯ ಆಗೋದಿಲ್ಲ ಅಂದಿದ್ದ ಕಾಂಜೀ “ಶ್ರೀ ಕೃಷ್ಣನ” ಮಾತು ಕೇಳಿ ಟೀವಿ ಚಾನಲ್ ಒಂದಕ್ಕೆ ಸಂದರ್ಶನ ಕೊಡುತ್ತಾನೆ. ಅಲ್ಲಿ ಆತ ಕೇಳಿದ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರಿಸಿ ಜನರ ಬೆಂಬಲ ಗಳಿಸುತ್ತಾನೆ. ಅಲ್ಲಿನ ಕೆಲವೊಂದು ಗೊಂದಲಗಳು ಹೀಗಿವೆ. ಒಂದು ಪ್ರಶ್ನೆಗೆ ಉತ್ತರಿಸುತ್ತಾ ಕಾಂಜೀ ಹೇಳುತ್ತಾನೆ, ಜನ ನನಗೆ ಸಣ್ಣದಿನಿಂದಲೂ ದೇವರು ನಮ್ಮ ತಂದೆಯ ಹಾಗೆ ಅಂತ ಹೇಳಿಕೊಟ್ಟಿದ್ದಾರೆ. ಹಾಗಾಗಿ ನಾನು ನನ್ನ ತಂದೆಯನ್ನು ನನ್ನ ಹಕ್ಕಿನ ಕುರಿತಾಗಿ ಕೇಳುತ್ತಿದ್ದೇನೆ ಅಂತ ಹೇಳುತ್ತಾನೆ… ವಿಚಿತ್ರ ನೋಡಿ ತನ್ನ ಸುಳ್ಳಿನ ಮೂಲಕ ಉತ್ತಮ ವ್ಯಾಪಾರ ಆಗುತ್ತಿದ್ದಾಗ ಭಗವಂತನಿಲ್ಲ ಅನ್ನುತ್ತಿದ್ದಾಗ ಬಾಲ್ಯದಲ್ಲಿ ದೇವರ ಬಗೆಗೆ ಹೇಳಿಕೊಟ್ಟಿದ್ದು ನೆನಪಾಗುತ್ತಿರಲಿಲ್ಲ, ಹಠಾತ್ ಅಂಗಡಿ ಬಿದ್ದು ನಷ್ಟವಾಗಿದೆ ಅಂದಾಗ ಮಾತ್ರ , ದೇವರು ಅಂದರೆ ನನ್ನ ತಂದೆ ಅನ್ನೋ ಬಾಲ್ಯದ ಮಾತು ನೆನಪಾಗುತ್ತೆ…. ಮುಂದೆ ಹರಕೆಗೆ ಕೂದಲು ಅರ್ಪಿಸುವುದರ ಬಗ್ಗೆ ಹೇಳುತ್ತಾ, ನೀವು ಶ್ರದ್ಧೆಯಿಂದ ಅರ್ಪಿಸಿದ ಕೂದಲನ್ನು ವಿದೇಶಗಳಿಗೆ ಮಾರಲಾಗುತ್ತದೆ, ನಿಮ್ಮ ಶ್ರದ್ಧೆಯ ವ್ಯಾಪಾರವಾಗುತ್ತದೆ ಅನ್ನುತ್ತಾನೆ. ಇಲ್ಲೊಂದು ವಿಷಯ ಗಮನಿಸಿ, ದೇವರ ವಿಗ್ರಹದ ಮೇಲಿನ ನಂಬಿಕೆ ಅಥವಾ ಶ್ರದ್ಧೆಯಿಂದ ಅದನ್ನು ಕೊಳ್ಳಲು ಬಂದವರಿಗೆ ಕಟ್ಟು ಕಥೆ ಹೇಳಿ ಅಧಿಕ ಬೆಲೆಗೆ ಮಾರುವುದು ಮತ್ತು ತಾವು ಹರಕೆಯಾಗಿ ಒಪ್ಪಿಸಿದ ನಿರುಪಯೋಗಿ ಕೂದಲನ್ನು ( ಕೂದಲಂತೂ ಕೆಲವು ಸಮಯದ ನಂತರ ಬಂದೇ ಬರುತ್ತದೆ) ವಿದೇಶಕ್ಕೆ ಮಾರುವುದು ಇವುಗಳೆರಡರಲ್ಲಿ ಯಾವುದು ಶ್ರದ್ಧೆಗೆ ಅಪಚಾರವಾಗುವಂತದು ?…. ಮುಂದೆ ಕೆಲವು ಜ್ಯೋತಿಷಿಗಳ ಬಗ್ಗೆ ಅಥವಾ ಮಂದಿರಗಳ ಬಗ್ಗೆ ಹೇಳುತ್ತಾ ಕಾಂಜೀ ಹೇಳುತ್ತಾನೆ ” ಮಾಫಿಯಾದವರು ಯಾವರೀತಿ ಗನ್ ತೋರಿಸಿ ಹೆದರಿಸುತ್ತಾರೋ ಅದೇ ರೀತಿ ಈ ಮಂದಿರದವರು ಭಗವಂತನನ್ನು ತೋರಿಸಿ ಹೆದರಿಸುತ್ತಾರೆ ” ಆದ್ರೆ ಮಾಫಿಯಾದವರು ನಿಮ್ಮ ಮನೆಗೆ ಬಂದು ಹೆದರಿಸಿದಂತೆ ಮಂದಿರದವರು ಎಲ್ಲೂ ಮನೆಗೆ ಬಂದು ಹೆದರಿಸುವ ಪರಿಪಾಠ ಎಲ್ಲೂ ಇಲ್ಲವಲ್ಲ. ನಂಬಿಕೆ ಇದ್ದವ ಮಾತ್ರ ಹೋಗೋದು , ಜನರೇ ಹೋಗುತ್ತಿದ್ದಾರೆ ಅಂತಾದಲ್ಲಿ ಮಂದಿರಗಳನ್ನು ದೂರುವುದರಲ್ಲಿ ಅರ್ಥವಿದೆಯೇ? ಮುಂದುವರಿದು ಆತನಲ್ಲಿ ಧರ್ಮದ ಪರಿಭಾಷೆ ಏನು ಅಂತ ಕೇಳಿದಾಗ ಕಾಂಜೀ ಹೇಳೋದು ” ಎಲ್ಲಿ ಧರ್ಮವಿದೆಯೋ ಅಲ್ಲಿ ಸತ್ಯ ಇರುವುದಿಲ್ಲ, ಸತ್ಯ ಇದ್ದಲ್ಲಿ ಧರ್ಮದ ಅಗತ್ಯ ಇರುವುದಿಲ್ಲ” ಅಂತ. ಆತನ ಎರಡನೇ ವಾಕ್ಯ ಒಪ್ಪಬಹುದೇನೋ ಆದರೆ ಮೊದನೆಯದು ಧರ್ಮ ಅನ್ನೋದರ ಅರ್ಥ ಗೊತ್ತಿರದವ ಮಾತ್ರ ಹಾಗೆ ಹೇಳಲು ಸಾಧ್ಯ ಅನ್ನೊದು ನನ್ನ ಅಭಿಪ್ರಾಯ.ಕೊನೆಯ ಪ್ರಶ್ನೆಯಾಗಿ ನಿರೂಪಕಿ ಧರ್ಮ ಒಬ್ಬ ವ್ಯಕ್ತಿಯ ಜೀವನದಲ್ಲಿ ಯಾವ ಕೆಲಸ ಮಾಡುತ್ತೆ ಅನ್ನೋದಕ್ಕೆ ಕಾಂಜೀಯ ಉತ್ತರ ಧರ್ಮ ಒಂದೋ ವ್ಯಕ್ತಿಯನ್ನು ನಿಸ್ಸಹಾಯಕನನ್ನಾಗಿ ಮಾಡುತ್ತೆ ಅಥವಾ ಆತಂಕವಾದಿಯನ್ನಾಗಿ ಮಾಡುತ್ತದೆ ಅನ್ನುತ್ತಾನೆ. ಆದರೆ ನನಗೆ ತಿಳಿದಂತೆ ಯಾವುದೇ ಧರ್ಮವನ್ನು ಸರಿಯಾಗಿ ಓದಿ ಅದರೊಳಗಿನ ತಿರುಳನ್ನು ನಿಜವಾಗಿ ಅರ್ಥೈಸಿಕೊಂಡರೆ ಆತ ನಿಸ್ಸಹಾಯಕ ಅಥವಾ ಆತಂಕವಾದಿಯಾಗಲೂ ಸಾಧ್ಯವೇ ಇಲ್ಲ. ಬರಿಯ ತಪ್ಪು ಕಲ್ಪನೆಯಿಂದ ಮಾತ್ರ ಹಾಗಾಗಲು ಸಾಧ್ಯ.
ಮುಂದೆ ಕೋರ್ಟಿನಲ್ಲಿ ವಾದ ನಡೆಸೋ ಹೊತ್ತಿಗೆ ಮಂದಿರಗಳ ಬಗ್ಗೆ ಒಂದಷ್ಟು ಕುಹಕ ಮಾಡುತ್ತಾನೆ ಉದಾಹರಣೆಗೆ ಮಂದಿರವನ್ನು ಶಾಪಿಂಗ್ ಮಾಲ್ ಅನ್ನೋದು, ಶಿವಲಿಂಗವನ್ನು ಬರಿಯ ಕಲ್ಲು ಅನ್ನೋದು ( ಈ ರೀತಿ ಹೇಳುವಾಗ ಟೀವಿ ಮುಂದೆ ನಾನು ಎಲ್ಲ ಧರ್ಮವನ್ನೂ ಗೌರವಿಸುತ್ತೇನೆ ಎಂದಿದ್ದನ್ನು ಮರೆತು ಬಿಡುತ್ತಾನೋ ಏನೋ). ಮುಂದೆ ಮೂರ್ತಿಗೆ ಮಾಡೋ ಹಾಲಿನಾಭಿಷೇಕದ ಬಗ್ಗೆ ಹೇಳುತ್ತಾ, ಜನರು ಸಾಲು ಸಾಲಾಗಿ ಕಲ್ಲಿಗೆ ಹಾಲು ಎರೆಯುತ್ತಾರೆ, ಅದೆಲ್ಲ ಚರಂಡಿಗೆ ಹೋಗಿ ಹಾಳಾಗುತ್ತದೆ. ಆದರೆ ಹೊರಗಿರೋ ಭಿಕ್ಷುಕನಿಗೆ ಮಾತ್ರ ಯಾರೂ ಕೊಡಲ್ಲ, ಹಾಲನ್ನು ವೇಸ್ಟ್ ಮಾಡಲಾಗುತ್ತದೆ ಅನ್ನುತ್ತಾನೆ. (ದೇವಳದ ಮಹತ್ವ ಅದರ ಹಿಂದಿರೋ ವೈಜ್ನಾನಿಕತೆಯ ಬಗ್ಗೆ ಇನ್ನೊಮ್ಮೆ ಪೋಸ್ಟ್ ಮಾಡುತ್ತೇನೆ). ನನ್ನ ಪ್ರಶ್ನೆ ಹಾಲಿನ ಅಭಿಷೇಕ ಅಥವ ದೇವರ ಮೂರ್ತಿಗೆ ಮಾಡೋ ಅಭಿಷೇಕದ ಮಹತ್ವ ಏನೆಂದರಿಯದೇ ವೇಸ್ಟ್ ಅಂತ ಹೇಗೆ ಹೇಳುತ್ತೀರಾ… ಹಾಗೆ ನೋಡಿದರೆ ಪಂಚತಾರ ಹೋಟೇಲಿನಲ್ಲಿ, ಅಥವಾ ಶ್ರೀಮಂತರ ಮದುವೆಯಲ್ಲಿ, ದೊಡ್ಡ ದೊಡ್ದ ಕಂಪನಿಗಳ ಪಾರ್ಟಿಗಳಲ್ಲಿ ಆಗೋ ವೇಸ್ಟ್ ಇದರ ಮುಂದೆ ಕಾಲ ಕಸಕ್ಕೆ ಸಮ ಅಲ್ವಾ ಅದನ್ನು ಯಾಕೆ ಪ್ರಶ್ನಿಸೋಲ್ಲ ? ಭಿಕ್ಷುಕನಿಗೆ ತನ್ನ ಹಾಲನ್ನು ಕೊಟ್ಟೆ ಅನ್ನುತ್ತಾನೆ ಆದರೆ ಅದುವರೆಗಿನ ಅವನ ವ್ಯಕ್ತಿತ್ವವನ್ನು ಗಮನಿಸಿದರೆ ಆ ರೀತಿ ಮಾಡುವ ಸಾಧ್ಯತೆಯನ್ನು ಮನಸೇಕೋ ಒಪ್ಪಿಕೊಳ್ಳುವುದಿಲ್ಲ. ( ಇಲ್ಲಿ ಮತ್ತೊಂದು ವಿಷಯ ಆತ ಯಾವ ರೀತಿ ಅರ್ಪಿಸಿದ ಕೂದಲಿನ ಧಂಧೆಯ ಬಗ್ಗೆ ಮಾಹಿತಿ ಕೊಡುತ್ತಾನೋ ಅದೇ ರೀತಿ ಭಿಕ್ಷೆಯ ವಿಷಯದಲ್ಲೂ ದಂಧೆ ನಡೆಯುತ್ತೆ ಅನ್ನೋದನ್ನು ಹೇಳಬೇಕಿತ್ತು ಆದರೇಕೋ ಅದರ ಪ್ರಸ್ತಾವನೆಯೇ ಬರುವುದಿಲ್ಲ)
ಹಾಗೆ ವಾದ ಮುಂದುವರಿಯುತ್ತಾ ಇರುವಾಗ ಎದುರುಗಡೆ ಲಾಯರ್ ಈ ಭೂಕಂಪವನ್ನು ದೇವರೇ ಮಾಡಿದ್ದು ಅನ್ನೋದಕ್ಕೆ ಸಾಕ್ಷಿ ಕೊಡಿ ಅನ್ನುತ್ತಾರೆ…. ಆಗ ಕಾಂಜೀ ನಿರುತ್ತರನಾಗುತ್ತಾನೆ. ಕೋರ್ಟ್ ಒಂದು ತಿಂಗಳ ಅವಧಿಯನ್ನು ಕೊಡುತ್ತದೆ.

No comments:

Post a Comment